Wednesday, July 14, 2010

ಚಟುವಟಿಕೆ ಆಧಾರಿತ ಕೇರಳ ಮಾದರಿ ಶಿಕ್ಷಣ

ಕಾಸರಗೋಡು: ಅನುಷ್ಠಾನಕ್ಕೆ ಯಾದಗಿರಿ ತಂಡ ನಿರ್ಧಾರ




ಕಾಸರಗೋಡು: ಯಾದಗಿರಿ ಜಿಲ್ಲೆಯ ಸುರಪುರ ಹೇಮನೂರು ಪಂಚಾಯಿತಿಯ 4 ಗ್ರಾಮಗಳ 4 ಶಾಲೆಗಳಿಗೆ ಸಂಬಂಧಿಸಿದ 60 ಪ್ರತಿನಿಧಿಗಳು
ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿ ಕ್ಷೇತ್ರ ಅಧ್ಯಯನ ಕೈಗೊಂಡರು.

‘ನಮ್ಮ ಶಾಲೆ’ ಯೋಜನೆಯಡಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸಮುದಾಯ ಸಹಭಾಗಿತ್ವದಲ್ಲಿ ಸುಧಾರಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೇರಳದ ಶಿಕ್ಷಣದ ಗುಣಮಟ್ಟ, ಕಲಿಕಾ ಕ್ರಮ, ಪೂರಕ ವಾತಾವರಣ, ಶಿಕ್ಷಣದಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಗಮನಸೆಳೆಯಿತು.

ಅನಂತಪುರದಲ್ಲಿ ನಡೆದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಬದಲಾಗುತ್ತಿರುವ ಕಲಿಕಾ ವಿಧಾನವನ್ನು ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕರುಣಾಕರ ಅನಂತಪುರ ವಿವರಿಸಿದರು. ಮೂಡಂಬೈಲು ಶಾಲೆ ಶಿಕ್ಷಕ ಪದ್ಮನಾಭ ಅವರು, ಕೇರಳದ ಶಿಕ್ಷಣ ಕ್ರಮದ 8 ಸಮಸ್ಯಾ ಮಂಡಲಗಳನ್ನು ವಿವರಿಸಿದರು.

ಅಡ್ಕತ್ತಬೈಲು ನಗರಪಾಲಿಕಾ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗೆ ಭೇಟಿ ನೀಡಿದ ತಂಡ ಶಾಲೆಯ 1ರಿಂದ 7ನೇ ತರಗತಿ ವರೆಸೆ ಕನ್ನಡ, ವಿಜ್ಞಾನ, ಗಣಿತ, ಇಂಗ್ಲಿಷ್, ಪ್ರಯೋಗಾಲಯ, ಕಂಪ್ಯೂಟರ್ ತರಗತಿಗಳನ್ನು ಖುದ್ದಾಗಿ ವೀಕ್ಷಿಸಿದರು. ನಗರಸಭಾ ಅಧ್ಯಕ್ಷೆ ಫಾತಿಮಾ ಇಬ್ರಾಹಿಂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಟಿ.ಕೆ.ಮಹಮ್ಮದ್ ಕುಞ್ಞೆ, ಮುಖ್ಯ ಶಿಕ್ಷಕ ಚಂದು ಅವರೊಂದಿಗೆ ಶಾಲಾ ಅಭಿವೃದ್ಧಿ ಕುರಿತು ಸಂವಾದ ನಡೆಸಿತು.

ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಬೆಳಿಂಜ ಗ್ರಾಮ ಸಭೆಯಲ್ಲಿ ಭಾಗವಹಿಸಿ ಪಂಚಾಯಿತಿ ವ್ಯವಸ್ಥೆ, ಅಭಿವೃದ್ಧಿ ಯೋಜನೆಗಳು, ಶಾಲೆಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು. ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ರೈ, ಉಪಾಧ್ಯಕ್ಷೆ ಶೈಲಜಾ ಭಟ್ ಮಾಹಿತಿ ನೀಡಿದರು.

ಮಂಜೇಶ್ವರದ ‘ಅನಂತ ಯಾತ್ರಿ ನಿವಾಸ’ದಲ್ಲಿ ಅಧ್ಯಯನ ಪ್ರವಾಸದ ಬಗ್ಗೆ ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಹೇಮನೂರಿನ ಶಿಕ್ಷಣದ ಭವಿಷ್ಯದ ಬಗ್ಗೆ ಚರ್ಚಿಸಿ 4 ಶಾಲೆಗಳ ಕ್ರಿಯಾಯೋಜನೆ ರೂಪಿಸಲಾಯಿತು.

ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಹಕಾರದಲ್ಲಿ ‘ಕರ್ನಾಟಕ ರಾಜ್ಯ ತರಬೇತಿದಾರರ ಸಮುಚ್ಛಯದ’ ಮೂಲಕ ‘ನಮ್ಮ ಶಾಲೆ’ ಯೋಜನೆ ನಡೆಯುತ್ತಿದ್ದು, ಯಾದಗಿರಿ, ಹುಣಸೂರು, ದಾವಣಗೆರೆ, ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಕ್ಲಸ್ಟರ್‌ಗಳ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಯೋಜನಾ ನಿರ್ದೇಶಕ ಕಿಶೋರ್ ಅತ್ತಾವರ ಮತ್ತು ತಂಡದ ನಾಯಕ ಉದಯ್‌ಕುಮಾರ್ ರಾವ್ ಬೇಕಲ್ ತಿಳಿಸಿದರು. ಸುರಪುರದ ಸುರೇಶ್ ಕುಮಾರ್, ನಾವೂರು ಕೃಷ್ಣ ಆಳ್ವ ತಂಡದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ೧೩/೭/೨೦೧೦
ವರದಿ : ಸುರೇಶ್ ಎಡನಾಡು

No comments:

Post a Comment