Thursday, July 15, 2010

ಕನ್ನಡ ಸಾಹಿತ್ಯ ಸಮ್ಮೇಳನ 24ರಿಂದ


ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಇದೇ 24 ಮತ್ತು 25ರಂದು ಜಿಲ್ಲಾ ಕನ್ನಡ ಯುವಜನೋತ್ಸವ ಹಾಗೂ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ದೈಗೋಳಿಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

24ರಂದು ಬೆಳಿಗ್ಗೆ 9ಕ್ಕೆ ನಡೆಯುವ ಕನ್ನಡ ಯುವಜನೋತ್ಸವವನ್ನು ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಭಾಕರ ಚೌಟ ಉದ್ಘಾಟಿಸುವರು. ವರ್ಕಾಡಿ ಪಂಚಾಯಿತಿ ಅಧ್ಯಕ್ಷ ಪಿ.ಬಿ.ಅಬೂಬಕ್ಕರ್ ಪಾತೂರು ಅಧ್ಯಕ್ಷತೆ ವಹಿಸುವರು. ಕಣಕೂರು ತಿರುಮಲೇಶ್ವರ ಭಟ್ ರಾಷ್ಟ್ರಧ್ವಜವನ್ನು ಮತ್ತು ಶಂಕರ ಮೋಹನ ಪೂಂಜ ಕನ್ನಡ ಧ್ವಜಾರೋಹಣ ನೆರವೇರಿಸುವರು.

25ರಂದು ಬೆಳಿಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಉದ್ಘಾಟಿಸುವರು. ಪ್ರೊ.ಎಂ.ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಚ್.ಕುಞ್ಞಂಬು ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಗಳಾ ನಾಯಕ್ ಸ್ಮರಣ ಸಂಚಿಕೆ, ಹರಿಕೃಷ್ಣ ಪುನರೂರು ನೂತನ ಕೃತಿಗಳನ್ನು ಬಿಡುಗಡೆ ಮಾಡುವರು. ಕಳೆದ ಜಿಲ್ಲಾ ಸಮ್ಮೇಳನದ ಅಧ್ಯಕ್ಷ ವಿದ್ವಾನ್ ಪೆರ್ಲ ಕೃಷ್ಣ ಭಟ್, ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ, ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸುವರು.


11.30ಕ್ಕೆ ಡಾ.ನಾ.ದಾಮೋದರ ಶೆಟ್ಟಿ ಅವರ ಅಧ್ಯಕ್ಷತೆ ಸಾಹಿತ್ಯ ಚಿಂತನ ಗೋಷ್ಠಿ, 12.30ಕ್ಕೆ ಕೋ.ರ. ಕಾಮತ್ ಅಧ್ಯಕ್ಷತೆಯಲ್ಲಿ ಹಾಸ್ಯ ಚಟಾಕಿ, 1.30ಕ್ಕೆ ಯಕ್ಷವೈಭವ ನಡೆಯಲಿದೆ.

ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಕೆ.ಚಿನ್ನಪ್ಪ ಗೌಡ ಸಮಾರೋಪ ಭಾಷಣ ಮಾಡುವರು. ಡಿ.ಕೆ.ಚೌಟ ಅಧ್ಯಕ್ಷತೆ ವಹಿಸುವರು.

ಈ ಸಂದರ್ಭದಲ್ಲಿ ಬಿ.ಜಿ.ಈಶ್ವರ ಭಟ್, ವಿದ್ವಾನ್ ಬಾಬು ರೈ, ಗಣಪತಿ ಭಟ್, ಎಂ.ವಿ.ಬಳ್ಳುಳ್ಳಾಯ, ಬಾಬೂಜಿ ಭಟ್, ತಿಲಕನಾಥ ಮಂಜೇಶ್ವರ, ಶಿವಧ್ವಜ್, ವಿಶ್ವವಿನೋದ ಬನಾರಿ, ಶಶಿಕಲಾ ಟೀಚರ್, ಪೂವಣಿ ಶೆಟ್ಟಿ ಪಾವಳ, ಇಸ್ಮಾಯಿಲ್ ಸೇನ್ಯ, ಉದಯೋನ್ಮುಖ ಕಾದಂಬರಿಕಾರ ಅರುಣಕುಮಾರ ಪಳ್ಳತ್ತಡ್ಕರನ್ನು ಸನ್ಮಾನಿಸಲಾಗುವುದು.

ಪ್ರಜಾವಾಣಿ: ೧೫/೦೭/ ೨೦೧೦
ವರದಿ : ಶಾಂತಾರಾಮ್

Wednesday, July 14, 2010

ಸಾಂಕ್ರಾಮಿಕ ರೋಗ ನಿಯಂತ್ರಣ

ಕಾಸರಗೋಡು ಜಿಲ್ಲೆಗೆ ರೂ.21 ಲಕ್ಷ


ಕಾಸರಗೋಡು: ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಸೊಳ್ಳೆಯಿಂದ ಹರಡುವ ರೋಗಗಳನ್ನು ನಿಯಂತ್ರಿಸುವ ಸಲುವಾಗಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಜ್ವರ ಬಾಧಿತ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರ ನಡೆಸಲು ಜಿಲ್ಲೆಗೆ 21 ಲಕ್ಷ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿದೆ.

ಜಿಲ್ಲೆಯಲ್ಲಿ ಜ್ವರ ಹೆಚ್ಚಾಗಿ ಪತ್ತೆಯಾಗಿರುವ ಕುತ್ತಿಕೋಲ್, ಕಳ್ಳಾರ್, ಪನತ್ತಡಿ, ಬಳಾಲ್, ಕೋಡೋಂ-ಬೆಳೂರ್, ಬೇಡಡ್ಕ, ದೇಲಂಪಾಡಿ, ಮುಳಿಯಾರು, ಕಾರಡ್ಕ, ಪುಲ್ಲೂರು-ಪೆರಿಯ, ಮಡಿಕೈ, ಕಿನಾನೂರ್-ಕರಿಂದಳ, ಈಸ್ಟ್ ಎಳೇರಿ, ವೆಸ್ಟ್ ಎಳೇರಿ ಪಂಚಾಯ್ತಿಗಳನ್ನು ಕೇಂದ್ರೀಕರಿಸಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ವಾರ್ಡ್ ಮಟ್ಟದಿಂದ ಪಂಚಾಯ್ತಿ ಸದಸ್ಯರು, ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ಸೊಳ್ಳೆಗಳನ್ನು ನಿರ್ಮೂಲನ ಮಾಡಲಾಗುವುದು. ವೈದ್ಯಕೀಯ ಶಿಬಿರ, ಜಾಗೃತಿ ಕಾರ್ಯಕ್ರಮಗಳೂ ನಡೆಯಲಿದೆ. ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರವರ ಮನೆಗಳ ವಠಾರವನ್ನು ಶುಚಿಗೊಳಿಸಲಾಗುವುದು. ಜಾಗೃತಿ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚರಂಡಿ, ಬಸ್ ನಿಲ್ದಾಣ, ಇತರ ಸಾರ್ವಜನಿಕ ಸಂಸ್ಥೆಗಳನ್ನು ಸ್ವಚ್ಛಗೊಳಿಸಲಾಗುವುದು. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿಯೂ ಜ್ವರ ಮತ್ತು ಇತರ ಸಾಂಕ್ರಾಮಿಕ ರೋಗಗಳಿಗೆ ಔಷಧಿಗಳು ಲಭ್ಯವಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಜೋಸ್ ಡಿಕ್ರೂಸ್ ತಿಳಿಸಿದ್ದಾರೆ.

ಪ್ರಜಾವಾಣಿ ೧೪ /೭/೨೦೧೦
ವರದಿ : ಸುರೇಶ್ ಎಡನಾಡು

ಚಟುವಟಿಕೆ ಆಧಾರಿತ ಕೇರಳ ಮಾದರಿ ಶಿಕ್ಷಣ

ಕಾಸರಗೋಡು: ಅನುಷ್ಠಾನಕ್ಕೆ ಯಾದಗಿರಿ ತಂಡ ನಿರ್ಧಾರ




ಕಾಸರಗೋಡು: ಯಾದಗಿರಿ ಜಿಲ್ಲೆಯ ಸುರಪುರ ಹೇಮನೂರು ಪಂಚಾಯಿತಿಯ 4 ಗ್ರಾಮಗಳ 4 ಶಾಲೆಗಳಿಗೆ ಸಂಬಂಧಿಸಿದ 60 ಪ್ರತಿನಿಧಿಗಳು
ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿ ಕ್ಷೇತ್ರ ಅಧ್ಯಯನ ಕೈಗೊಂಡರು.

‘ನಮ್ಮ ಶಾಲೆ’ ಯೋಜನೆಯಡಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸಮುದಾಯ ಸಹಭಾಗಿತ್ವದಲ್ಲಿ ಸುಧಾರಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೇರಳದ ಶಿಕ್ಷಣದ ಗುಣಮಟ್ಟ, ಕಲಿಕಾ ಕ್ರಮ, ಪೂರಕ ವಾತಾವರಣ, ಶಿಕ್ಷಣದಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಗಮನಸೆಳೆಯಿತು.

ಅನಂತಪುರದಲ್ಲಿ ನಡೆದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಬದಲಾಗುತ್ತಿರುವ ಕಲಿಕಾ ವಿಧಾನವನ್ನು ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕರುಣಾಕರ ಅನಂತಪುರ ವಿವರಿಸಿದರು. ಮೂಡಂಬೈಲು ಶಾಲೆ ಶಿಕ್ಷಕ ಪದ್ಮನಾಭ ಅವರು, ಕೇರಳದ ಶಿಕ್ಷಣ ಕ್ರಮದ 8 ಸಮಸ್ಯಾ ಮಂಡಲಗಳನ್ನು ವಿವರಿಸಿದರು.

ಅಡ್ಕತ್ತಬೈಲು ನಗರಪಾಲಿಕಾ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗೆ ಭೇಟಿ ನೀಡಿದ ತಂಡ ಶಾಲೆಯ 1ರಿಂದ 7ನೇ ತರಗತಿ ವರೆಸೆ ಕನ್ನಡ, ವಿಜ್ಞಾನ, ಗಣಿತ, ಇಂಗ್ಲಿಷ್, ಪ್ರಯೋಗಾಲಯ, ಕಂಪ್ಯೂಟರ್ ತರಗತಿಗಳನ್ನು ಖುದ್ದಾಗಿ ವೀಕ್ಷಿಸಿದರು. ನಗರಸಭಾ ಅಧ್ಯಕ್ಷೆ ಫಾತಿಮಾ ಇಬ್ರಾಹಿಂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಟಿ.ಕೆ.ಮಹಮ್ಮದ್ ಕುಞ್ಞೆ, ಮುಖ್ಯ ಶಿಕ್ಷಕ ಚಂದು ಅವರೊಂದಿಗೆ ಶಾಲಾ ಅಭಿವೃದ್ಧಿ ಕುರಿತು ಸಂವಾದ ನಡೆಸಿತು.

ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಬೆಳಿಂಜ ಗ್ರಾಮ ಸಭೆಯಲ್ಲಿ ಭಾಗವಹಿಸಿ ಪಂಚಾಯಿತಿ ವ್ಯವಸ್ಥೆ, ಅಭಿವೃದ್ಧಿ ಯೋಜನೆಗಳು, ಶಾಲೆಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು. ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ರೈ, ಉಪಾಧ್ಯಕ್ಷೆ ಶೈಲಜಾ ಭಟ್ ಮಾಹಿತಿ ನೀಡಿದರು.

ಮಂಜೇಶ್ವರದ ‘ಅನಂತ ಯಾತ್ರಿ ನಿವಾಸ’ದಲ್ಲಿ ಅಧ್ಯಯನ ಪ್ರವಾಸದ ಬಗ್ಗೆ ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಹೇಮನೂರಿನ ಶಿಕ್ಷಣದ ಭವಿಷ್ಯದ ಬಗ್ಗೆ ಚರ್ಚಿಸಿ 4 ಶಾಲೆಗಳ ಕ್ರಿಯಾಯೋಜನೆ ರೂಪಿಸಲಾಯಿತು.

ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಹಕಾರದಲ್ಲಿ ‘ಕರ್ನಾಟಕ ರಾಜ್ಯ ತರಬೇತಿದಾರರ ಸಮುಚ್ಛಯದ’ ಮೂಲಕ ‘ನಮ್ಮ ಶಾಲೆ’ ಯೋಜನೆ ನಡೆಯುತ್ತಿದ್ದು, ಯಾದಗಿರಿ, ಹುಣಸೂರು, ದಾವಣಗೆರೆ, ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಕ್ಲಸ್ಟರ್‌ಗಳ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಯೋಜನಾ ನಿರ್ದೇಶಕ ಕಿಶೋರ್ ಅತ್ತಾವರ ಮತ್ತು ತಂಡದ ನಾಯಕ ಉದಯ್‌ಕುಮಾರ್ ರಾವ್ ಬೇಕಲ್ ತಿಳಿಸಿದರು. ಸುರಪುರದ ಸುರೇಶ್ ಕುಮಾರ್, ನಾವೂರು ಕೃಷ್ಣ ಆಳ್ವ ತಂಡದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ೧೩/೭/೨೦೧೦
ವರದಿ : ಸುರೇಶ್ ಎಡನಾಡು