ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪರ್ತಕರ್ತರು ಪತ್ರಿಕಾ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಿದರು.ಪತ್ರಿಕಾ ದಿನಾಚರಣೆಯಂದು ನಗರದ ಎಲ್ಲಾ ಪತ್ರಕರ್ತರು ತಾಲೂಕಿನ ಅತ್ಯಂತ ಕುಗ್ರಾಮ ಎನಿಸಿಕೊಂಡಂತಹ ಪ್ರದೇಶಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಇಂದು ಮಾಧ್ಯಮಗಳ ಅನಿವಾರ್ಯತೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಮೂಲಕ ಪತ್ರಿಕಾ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಿದರು.
ಪತ್ರಿಕಾ ದಿನಾಚರಣೆ
ಪತ್ರಿಕಾ ದಿನಾಚರಣೆ
ಪತ್ರಕರ್ತರು ಪ್ರತಿದಿನವೂ ಒತ್ತಡದಲ್ಲಿರುವುದು ಸಹಜ. ಬಹುತೇಕ ಸಂದರ್ಭದಲ್ಲಿ ಅದೆಲ್ಲವೂ ನಗರದ ಒಳಗಡೆಗೇ ಸೀಮಿತವಾಗಿರುತ್ತದೆ. ಹೀಗಾಗಿ ಅನೇಕ ಗ್ರಾಮೀಣ ಪ್ರದೇಶದ ನೈಜ ಸಮಸ್ಯೆಗಳು ಹಾಗೂ ಅದರ ಒಳಗಿನ ತಲ್ಲಣಗಳು ಹೊರ ಜಗತ್ತಿಗೆ ಅರ್ಥವಾಗಿರುವುದಿಲ್ಲ. ಇಂತಹ ಸಮಸ್ಯೆಗಳನ್ನು ಹೊತ್ತ ಗ್ರಾಮ-ಹಳ್ಳಿಗಳು ರಾಜ್ಯದಲ್ಲಿವೆ. ಆದರೆ ಅವುಗಳಿಗೆ ಕಾಯಕಲ್ಪ ನೀಡುವ ಕೆಲಸ ಇದುವರೆಗೆ ಆಗಿಲ್ಲ. ಹೀಗಾಗಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಪುತ್ತೂರು ಪತ್ರಕರ್ತರ ಸಂಘದ ವತಿಯಿಂದ ತಾಲೂಕಿನ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಮಾಧ್ಯಮದ ಮೂಲಕ ಹೊರಜಗತ್ತಿಗೆ ತಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.
ತಾಲೂಕು ಪತ್ರಕರ್ತರ ಈ ಕಾರ್ಯಕ್ರಮವು ಗ್ರಾಮದ ಜನತೆಗೆ ಸಂತಸ ಮೂಡಿಸಿದೆ. ಇದರಿಂದಾಗಿ ಊರಿನ ಸಮಸ್ಯೆಗಳು ಹೊರಜಗತ್ತಿಗೆ ತಿಳಿದು ಊರಿನ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಹೇಳುತ್ತಾರೆ. ಈ ನಡುವೆ ಬಹುತೇಕ ಪತ್ರಕರ್ತರು ಕೂಡಾ ಈ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡು ಗ್ರಾಮದ ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಊರವರೊಂದಿಗೆ ಮಾತನಾಡಿದರು. ಈ ವರದಿಗಳು ಪತ್ರಿಕೆಗಳಲ್ಲಿ ಬಂದ ಬಳಿಕ ಆಗಾಗ ಈ ಸಮಸ್ಯೆಗಳ ನಿವಾರಣೆಯ ಬಗ್ಗೆ ಕಾಳಜಿ ವಹಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಈ ಕಾರ್ಯಕ್ರಮವು ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಇಡೀ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲದ್ದರೂ ಹಳ್ಳಿಯೊಂದಕ್ಕೆ ಮೂಲಭೂತ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನಾದರೂ ಮಾಡಬಹುದು ಎಂಬ ಯೋಚನೆ ಅವರಲ್ಲಿದೆ.
No comments:
Post a Comment