
ಕಾಸರಗೋಡು: ಮುಂಬೈ ಸರಣಿ ಸ್ಫೋಟದ ಬಳಿಕ ಸ್ಥಗಿತಗೊಂಡಿದ್ದ ಸಮಗ್ರ ಮಾತುಕತೆ ಪ್ರಕ್ರಿಯೆಯಿಂದ ಭಯೋತ್ಪಾದನೆಯನ್ನು ಹೊರಗಿಡಲು ಒಪ್ಪುವ ಮೂಲಕ ಭಾರತವು ಒತ್ತಡಕ್ಕೆ ಮಣಿದಂತಾಗಿದೆ ಎಂಬ ಆರೋಪಗಳ ಮಧ್ಯೆಯೇ ಸ್ಪಷ್ಟನೆ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್, ಸಮಗ್ರ ಮಾತುಕತೆಯ ಪುನರಾರಂಭವು, ಪಾಕ್ ಮಣ್ಣಿನಿಂದ ಹೊರಬರುವ ಉಗ್ರವಾದಿ ಕೃತ್ಯಗಳ ವಿರುದ್ಧ ನಿರ್ಣಾಯಕ ಮತ್ತು ಪರಿಣಾಮಕಾರಿ ಕ್ರಮವನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.ಭಯೋತ್ಪಾದನೆ ಕುರಿತ ಕ್ರಮಕ್ಕಾಗಿ ಸಮಗ್ರ ಮಾತುಕತೆಯ ಪುನರಾರಂಭವು ಬಲಿಪಶುವಾಗಬಾರದು ಎಂಬ ಪಾಕಿಸ್ತಾನದ ವಾದದ ಬಗ್ಗೆ ಹಾಗೂ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿರುವ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಹೆಣಗಿದಂತೆ ಕಂಡು ಬಂದ ಸಿಂಗ್, ಉಭಯ ರಾಷ್ಟ್ರಗಳ ನಡುವಣ ಯಾವುದೇ ಸಂಬಂಧ ಮುಂದುವರಿಸಲು ಪರಿಣಾಮಕಾರಿ ಮತ್ತು ನಿರ್ಣಾಯಕ ಕ್ರಮಗಳನ್ನು ಪಾಕಿಸ್ತಾನ ಕೈಗೊಳ್ಳಬೇಕು ಎಂದರು.ಗುರುವಾರ ನಡೆದ ಸುದೀರ್ಘ ಮಾತುಕತೆಗಳ ಬಳಿಕ ಮಾತುಕತೆ ಪುನರಾರಂಭದ ಕುರಿತ ಬಿಕ್ಕಟ್ಟು ಶಮನವಾಗಿದೆಯೇ ಎಂದು ಕೇಳಿದಾಗ, ಇದಕ್ಕೆ ಕಾಲವೇ ಉತ್ತರಿಸಬೇಕು ಎಂದು ಸಿಂಗ್ ಪ್ರತಿಕ್ರಿಯಿಸಿದರು.ಭಾರತದ ವಿರುದ್ಧದ ಭಯೋತ್ಪಾದನೆಯು ಸರಕಾರೇತರ ಶಕ್ತಿಗಳಿಂದ ಆಗುತ್ತಿದೆ ಎಂಬ ಪಾಕಿಸ್ತಾನದ ವಾದದ ಫಲದಿಂದಾಗಿ ಭಯೋತ್ಪಾದನೆಯನ್ನು ಹೊರಗಿಡಲು ತೀರ್ಮಾನಿಸಲಾಯಿತೇ ಎಂದು ಕೇಳಿದಾಗ, ತಾನು ಈಗಿನ ಪಾಕಿಸ್ತಾನಿ ಸರಕಾರವನ್ನು ದೂಷಿಸುತ್ತಿಲ್ಲ. ಆದರೆ ಹಿಂದಿನ ಕೆಲವು ಅಧಿಕೃತ ಶಕ್ತಿಗಳು ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿದ್ದವು ಎಂದು ಹೇಳಿದರು.ಕಾಶ್ಮೀರ ವಿಷಯದ ಬಗ್ಗೆ ಜಂಟಿ ಹೇಳಿಕೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲದಿದ್ದರೂ, "ಬಾಕಿ ಉಳಿದಿರುವ ವಿವಾದಗಳೂ ಸೇರಿದಂತೆ ಸಮಗ್ರ ವಿಷಯಗಳ ಚರ್ಚೆಗೆ ಭಾರತವು ಸಿದ್ಧವಿದೆ" ಎಂದು ಮನಮೋಹನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಗ್ರ ಮಾತುಕತೆಯಡಿ ಕಾಶ್ಮೀರ ವಿವಾದವೂ ಸೇರುತ್ತದೆ ಎಂಬುದು ಇಲ್ಲಿ ಉಲ್ಲೇಖಾರ್ಹ.ಭಯೋತ್ಪಾದನೆ ವಿರುದ್ಧ ಪಾಕಿಸ್ತಾನವು ಕ್ರಮ ಕೈಗೊಳ್ಳುವ ಬಗ್ಗೆ ನಿಖರವಾದ ಸೂಚನೆಗಳು ಲಭ್ಯವಾಗುವವರೆಗೂ ಪಾಕ್ ಜೊತೆಗೆ ಯಾವುದೇ ಮಾತುಕತೆ ಇಲ್ಲ ಎಂದು ಹೇಳುತ್ತಲೇ ಬಂದಿದ್ದ ಭಾರತವು ಈಗ ಜಂಟಿ ಹೇಳಿಕೆಯಲ್ಲಿ, ಭಯೋತ್ಪಾದನೆಯಿಂದ ಸಮಗ್ರ ಮಾತುಕತೆಯನ್ನು ಹೊರಗಿಡುವ ನಿರ್ಧಾರಕ್ಕೆ ಒಪ್ಪುವ ಮೂಲಕ ಪಾಕ್ ಒತ್ತಡಕ್ಕೆ ಮಣಿದಂತಾಗಿದೆ ಎಂದು ಭಾವಿಸಲಾಗುತ್ತಿದೆ.ಆ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ನಿಲುವಿಗೆ ಸ್ಪಷ್ಟನೆ ನೀಡಲು ತ್ರಾಸಪಟ್ಟಂತೆ ಕಂಡುಬಂದ ಮನಮೋಹನ್ ಸಿಂಗ್, ಮುಂಬೈಯನ್ನು ನಡುಗಿಸಿದಂತಹ ಭಯೋತ್ಪಾದನಾ ಕೃತ್ಯಗಳಿಗೆ ಕಾರಣಕರ್ತರಾದವರನ್ನು ದಂಡಿಸುವವರೆಗೂ ಸಮಗ್ರ ಮಾತುಕತೆ ಇಲ್ಲ ಎಂದು ಹೇಳಿದರು.ಭಯೋತ್ಪಾದನಾ ಚಟುವಟಿಕೆಗಳು ಮುಂದುವರಿದರೆ, ಮಾತುಕತೆಯ ಪ್ರಶ್ನೆಯೇ ಇಲ್ಲ. ಅದರಲ್ಲಿಯೂ ಸಮಗ್ರ ಮಾತುಕತೆ ಸಾಧ್ಯವೇ ಇಲ್ಲ. ಭಯೋತ್ಪಾದನೆ ತಡೆಗೆ ಪಾಕ್ ಕ್ರಮ ಕೈಗೊಳ್ಳದಿದ್ದರೆ ಯಾವುದೇ ಮಾತುಕತೆಯೂ ಯಶಸ್ವಿಯಾಗದು ಎಂದರು.
No comments:
Post a Comment