ಕಾಸರಗೋಡು: ಮುಂಬೈ ಭೂಗತ ಲೋಕದ ಪಾತಕಿ ಚೋಟಾ ರಾಜನ್ ಸಹಚರರು ಎನ್ನಲಾದ ನಾಲ್ವರನ್ನೊಳಗೊಂಡ ಕಳವು ತಂಡವನ್ನು ಕಾಞಂಗಾಡು ಡಿವೈಎಸ್ಪಿ ಪಿ.ಹಬೀಬ್ ರಹಮಾನ್ ನೇತೃತ್ವದ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.
ಕುಂಬಳೆ ಉಳುವಾರು ನಿವಾಸಿ ಎಂ.ಅಬ್ದುಲ್ ಲತೀಫ್ ಯಾನೆ ಲತೀಫ್, ಕುಟ್ಯಾಡಿಯ ಕೆ.ನೌಶಾದ್, ಕೊಟ್ಟಾಯಂ ಕಿಡಂಗೂರಿನ ಸಿರಿಲ್ ಮಾಥ್ಯೂ, ಕಣ್ಣೂರು ಕಟ್ಟೋಳಿ ನಿವಾಸಿ ತಾರಂಬತ್ ರಮೇಶನ್ ಬಂಧಿತರು.
ಆರೋಪಿಗಳಿಂದ ಒಂದು ರಿವಾಲ್ವರ್, ಎರಡು ಚೂರಿ ಮತ್ತು ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ.
ಗುರುವಾರ ಬೆಳಗ್ಗೆ ಕಾಞಂಗಾಡು ರೈಲ್ವೇ ಸ್ಟೇಷನ್ ಬಳಿ ಪ್ರಯಾಣಿಕರ ವಸ್ತುಗಳನ್ನು ಕಳವು ಮಾಡಲು ಬಂದಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದರು. ಇವರಲ್ಲಿ ಸಿರಿಲ್ ಮಾಥ್ಯೂ ಚೋಟಾ ರಾಜನ್ನ ಸಹಚರ. ಅಂಧೇರಿ, ರತ್ನಗಿರಿ ಎಂಬಲ್ಲಿ ಕೋಟ್ಯಂತರ ರೂ.ಗಳನ್ನು ಬ್ಯಾಂಕಿನಿಂದ ಕಳವು ಮಾಡಿದ ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದಾನೆ. ಉಪ್ಪಳದ ರಫೀಖ್ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳನ್ನು ಸಂಜೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.
ಕಾಸರಗೋಡಿನಲ್ಲಿ ಮಳೆ: 253 ಮನೆಗಳಿಗೆ ಹಾನಿ
ಕಾಸರಗೋಡು: ಜಿಲ್ಲೆಯಲ್ಲಿ ಮೇ 24ರಿಂದ ಇದು ವರೆಗೆ ಸುರಿದ ಮಳೆ ಮತ್ತು ಪ್ರಕೃತಿ ವಿಕೋಪಕ್ಕೆ 323 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
30 ಮನೆಗಳು ಸಂಪೂರ್ಣ ಹಾನಿಗೊಂಡಿದೆ. ಬುಧವಾರ 15 ಮನೆಗಳು ಭಾಗಶಃ ಹಾನಿಗೊಂಡಿದೆ. ಪೂರ್ಣವಾಗಿ ಕುಸಿದ ಮನೆಗಳಿಗೆ 8,88,350 ರೂ. ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ 19,83,050 ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಬುಧವಾರ 61.4 ಮಿ.ಮೀ. ಮಳೆ ಸುರಿದಿದ್ದು, 80.5 ಹೆಕ್ಟೇರ್ ಕೃಷಿ ನಾಶಗೊಂಡಿದೆ. ಇದು ವರೆಗೆ ಮಳೆಯಿಂದ 190 ಹೆಕ್ಟೇರ್ ಪ್ರದೇಶದ ಕೃಷಿ ನಾಶಗೊಂಡಿದೆ. ಇದರಿಂದ 81 ಲಕ್ಷ ರೂ.ಗಳ ನಷ್ಟ ಆಗಿದೆ. ಮೇ 24ರಿಂದ ಇದು ವರೆಗೆ ಜಿಲ್ಲೆಯಲ್ಲಿ 1,013 ಮಿ.ಮೀ. ಮಳೆಯಾಗಿದೆ.
ಆದೂರು, ಕೊಡ್ಲಮೊಗರು, ಪಿಲಿಕ್ಕೋಡು, ಚೆರ್ವತ್ತೂರು, ಚಿತ್ತಾರಿಕಲ್, ಪನೆಯಾಲ್, ಪಡನ್ನ, ಕರಿಂದಳ ಗ್ರಾಮಗಳಲ್ಲಿ ಮಳೆಯಿಂದ ಭಾರೀ ನಷ್ಟ ಸಂಭವಿಸಿದೆ. ಮೊಗ್ರಾಲ್ ಪುತ್ತೂರು ಪಂಚಾಯ್ತಿಯ ನಾಂಗಿ, ಗಾಂಧೀನಗರ, ಕೊಪ್ಪಳ ಎಂಬಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಇಲ್ಲಿ 200 ಮೀಟರ್ ಪ್ರದೇಶದಲ್ಲಿ ಕಡಲ್ಕೊರೆತ ಸಂಭವಿಸಿದೆ.
ಮುನ್ನೆಚ್ಚರಿಕೆ: ಮುಂದಿನ 48 ತಾಸುಗಳೊಳಗೆ ಕರಾವಳಿ ತೀರದಲ್ಲಿ 45ರಿಂದ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಫಿಶರೀಸ್ ಕಂಟ್ರೋಲ್ ರೂಂ ಅಧಿಕಾರಿ ತಿಳಿಸಿದ್ದಾರೆ.
4ನೇ ತರಗತಿಯ ಬಾಲಕ ಬಾವಿಗೆ ಬಿದ್ದು ಸಾವು
ಕಾಸರಗೋಡು: ಇಲ್ಲಿನ ಪರಪ್ಪೆ ಶಾಲೆಯ 4ನೇ ತರಗತಿಯ ವಿದ್ಯಾಥರ್ಿ ಮನೆ ಸಮೀಪದ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಪರಪ್ಪೆ ಎಂಬಲ್ಲಿ ಗುರುವಾರ ನಡೆದಿದೆ.
ಏರಂಕನ್ನ್ ನಿವಾಸಿ ತೋಮಸ್ ಅವರ ಪುತ್ರ ಅಪ್ಪ ಯಾನೆ ಜೋಸೆಫ್(9) ಸಾವನ್ನಪ್ಪಿದ ಬಾಲಕ. ಈತ ತನ್ನ ತಮ್ಮನಿಗೆ ಜ್ವರ ಬಾಧಿಸಿದ ಕಾರಣ ಶಾಲೆಗೆ ರಜಾ ಹಾಕಿ ಶುಶ್ರೂಷೆಗೆ ನಿಂತಿದ್ದ. ತಂದೆ ತೋಮಸ್ ಪೈಂಟಿಂಗ್ ಕೆಲಸ ಮತ್ತು ತಾಯಿ ಶಿಜಿ ಉದ್ಯೋಗ ಖಾತರಿ ಯೋಜನೆಯ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಶವವನ್ನು ಕಾಞಂಗಾಡು ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದೆ.
ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕರನ್ನು ತಡೆದು ಇರಿತ
ಕಾಸರಗೋಡು: ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕರನ್ನು ತಡೆದು ಇರಿದು ಗಾಯಗೊಳಿಸಿದ ಘಟನೆ ಗುರುವಾರ ಚಂದ್ರಗಿರಿ ಬಳಿ ನಡೆದಿದೆ.
ಚೆಮ್ನಾಡಿನ ನಿವಾಸಿ ಹಾಗೂ ನಗರದ ಪ್ರೆಸ್ಕ್ಲಬ್ ಜಂಕ್ಷನ್ನ ಆಟೋ ಚಾಲಕ ಪಿ.ಎ.ಮುಹಮ್ಮದ್ ಫೈಸಲ್ ಮತ್ತು ಆತನ ಗೆಳೆಯ ಫಸಲ್ ಎಂಬವರನ್ನು ಚಂದ್ರಗಿರಿ ಬಳಿ ಹೊಂಚು ಹಾಕಿ ಗಾಯಗೊಳಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಸಹೀರ್ ಎಂಬಾತನೇ ಈ ಕೃತ್ಯವೆಸಗಿದ್ದಾನೆ ಎಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು ದೂರಿದ್ದಾರೆ. ರಾಜಕೀಯ ದ್ವೇಷವೇ ಘಟನೆಗೆ ಕಾರಣ ಎನ್ನಲಾಗಿದೆ.
ರಿಯಾನ ನಾಪತ್ತೆ: ಮಾಹಿತಿಗೆ ಪೊಲೀಸರ ಮನವಿ
ಕಾಸರಗೋಡು: ಕಾಸರಗೋಡಿನಿಂದ ನಾಪತ್ತೆಯಾದ ವಿದ್ಯಾಥರ್ಿನಿ ರಿಯಾನ ಕುರಿತು ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಚೆಂಗಳ ತೈವಳಪ್ಪಿನ ಸಿ.ಎಚ್.ಫೌಸಿಯಾರ ಪುತ್ರಿ ಪಿ.ಕೆ.ರಿಯಾನ(16) ನಾಪತ್ತೆಯಾಗಿದ್ದಾಳೆ. ಮೇ 18ರಂದು ಬೆಳಗ್ಗೆ 9.30ಕ್ಕೆ ನಾಯಮ್ಮಾರ್ಮೂಲೆ ಶಾಲಾ ವಿದ್ಯಾಥರ್ಿನಿಯಾಗಿದ್ದ ಈಕೆ ವಿಶೇಷ ತರಗತಿ ಇದೆ ಎಂದು ಮನೆಯಲ್ಲಿ ಹೇಳಿ ಹೊರಟವಳು ಮತ್ತೆ ವಾಪಾಸಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ 16 ಪವನ್ ಚಿನ್ನಾಭರಣ ಅಪಹರಣ
ಕಾಸರಗೋಡು: ಚೆಮ್ನಾಡು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಕಾರು ಚಾಲಕನ ಮೇಲೆ ತಂಡ ಹಲ್ಲೆ ನಡೆಸಿ ನಗ-ನಗದು ಅಪಹರಿಸಿದ ಘಟನೆ ಬುಧವಾರ ಸಂಜೆ ಪೆರ್ಲಡ್ಕದಲ್ಲಿ ನಡೆದಿದೆ.
ಕಾರು ಚಾಲಕ ಕೊಳತ್ತೂರು ಮಾರಿಕುಳ ನಿವಾಸಿ ಕೆ.ವಿ.ಪ್ರದೀಪ್ ಸಹಿತ ಕಾರಿನಲ್ಲಿದ್ದ ಮನೋಜ್ ಎಂಬವರ ಮೇಲೆ ನಡೆಸಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪ್ರದೀಪ್ ಅವರ ಸಹೋದರರಾದ ಪ್ರಮೋದ್ ಕುಮಾರ್, ಪ್ರಸಾದ್ ಕುಮಾರ್ ಎಂಬವರ ಮೇಲೂ ತಂಡ ಹಲ್ಲೆ ನಡೆಸಿದೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಲ್ಲಿದ್ದ 16 ಪವನ್ ಚಿನ್ನಾಭರಣ ಸಹಿತ 5,300 ರೂ. ಮತ್ತು ಮೊಬೈಲ್ ಫೋನ್ ತಂಡ ಎಗರಿಸಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ.
ಬಸ್ಸಿನಿಂದ ಬಿದ್ದು ಅಂಗವಿಕಲನ ಕಾಲು ಗಂಭೀರ
ಕಾಸರಗೋಡು: ಹತ್ತುವ ವೇಳೆ ಬಸ್ಸು ಬಿಟ್ಟ ಪರಿಣಾಮ ಅಂಗವಿಕಲ ಪ್ರಯಾಣಿಕರ ಕಾಲು ಮುರಿದ ಘಟನೆ ಬುಧವಾರ ಸಂಜೆ ನುಳ್ಳಿಪ್ಪಾಡಿಯಲ್ಲಿ ನಡೆದಿದೆ.
ಇದೇ ಬಸ್ಸಿನ ಕ್ಲೀನರ್ ಆಗಿರುವ ಅಣಂಗೂರು ತುತರ್ಿ ನಿವಾಸಿ ಅಬ್ದುಲ್ ರಸಾಕ್ಗೆ ಈ ದುರವಸ್ಥೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿ ಬಸ್ಸಿನ ಚಾಲಕ ಎಂ.ಎ.ಅಬ್ದುಲ್ಲ ಎಂಬಾತನ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೃಹಿಣಿ ನಾಪತ್ತೆ
ಮಂಜೇಶ್ವರ: ಇಲ್ಲಿಗೆ ಸಮೀಪದ ಕುಂಜತ್ತೂರು ನಿವಾಸಿ ಎಂ.ಕೃಷ್ಣನ್ ಅವರ ಪತ್ನಿ ಸಾವಿತ್ರಿ(40) ಎಂಬವರು ನಾಪತ್ತೆಯಾಗಿದ್ದಾರೆ ಎಂದು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೂಲತಃ ಆಂಧ್ರ ನಿವಾಸಿಯಾಗಿರುವ ಇವರು ಕೆಲವು ವರ್ಷಗಳಿಂದ ಇಲ್ಲಿ ವಾಸವಾಗಿದ್ದರು. ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಇವರನ್ನು ಹುಡುಕಿದರೂ ಸಿಗದ ಕಾರಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
No comments:
Post a Comment